LATEST NEWS
3.76 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶಕ್ಕೆ..ಆರೋಪಿಗಳು ಪರಾರಿ
ಕುಂದಾಪುರ: ಕೋಟೇಶ್ವರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಶನಿವಾರ ರಾತ್ರಿ ದಾಳಿ ನಡೆಸಿ, ಅಪಾರ ಪ್ರಮಾಣದ ಅಕ್ಕಿ ವಶಕ್ಕೆ ಪಡೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದಾಳಿ ವೇಳೆ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ಆರೋಪಿಗಳನ್ನು ಕೋಟೆಶ್ವರ ನಿವಾಸಿ ಉದಯ್ ಕುಮಾರ್ ಶೆಟ್ಟಿ, ಮಂಗಳೂರು ನಿವಾಸಿ ಆಜಾಮ್, ಉಡುಪಿ ನಿವಾಸಿ ರಮಾ ಪೂಜಾರಿ ಎಂದು ತಿಳಿದು ಬಂದಿದ್ದು, ಆರೋಪಿಗಳಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ. ಕೋಟೇಶ್ವರ ಗ್ರಾಮದ ಹಾಲಾಡಿ ರಸ್ತೆಯಲ್ಲಿರುವ ನಂದಿ ಹೋಟೆಲ್ನ ಹಿಂಭಾಗದಲ್ಲಿ ಉದಯ್ ಕುಮಾರ್ ಶೆಟ್ಟಿ ಎಂಬುವರಿಗೆ ಸೇರಿದ್ದ ಶೆಡ್ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ ಪಡಿತರ ಅಕ್ಕಿಯನ್ನು ಸಾಗಾಟ ಮಾಡಲು ಯತ್ನಿಸಲಾಗುತ್ತಿತ್ತು. ಈ ವೇಳೆ ಮಾಹಿತಿ ಆಧರಿಸಿ ಕುಂದಾಪುರ ಠಾಣಾಧಿಕಾರಿ ಸದಾಶಿವ ಗವರೋಜಿ ಮತ್ತು ಸಿಬ್ಬಂದಿ ಹಾಗೂ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ದಾಳಿ ಮಾಡಿ ಅಕ್ಕಿ ವಶಕ್ಕೆ ಪಡೆದಿದ್ದಾರೆ.
3,76,800 ರೂ. ಮೌಲ್ಯದ 25,120 ಕೆಜಿ ಪಡಿತರ ಅಕ್ಕಿ, 2 ಲಕ್ಷ ರೂ. ಮೌಲ್ಯದ ಗೂಡ್ಸ್ ಗಾಡಿ, 4 ಲಕ್ಷ ರೂ ಮೌಲ್ಯದ ಟಾಟಾ ಲಾರಿ, 2,000 ರೂ. ಮೌಲ್ಯದ ಹೊಲಿಗೆ ಯಂತ್ರ ಹಾಗೂ 3,000 ರೂ. ಮೌಲ್ಯದ ತೂಕ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.
You must be logged in to post a comment Login