ತಿರುಪತಿ/ಬೆಂಗಳೂರು ಜುಲೈ 06: “ನಿಜವಾದ ಭಕ್ತಿ ಮತ್ತು ದೃಢ ಸಂಕಲ್ಪವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ” ಎಂಬುದನ್ನು ಕರ್ನಾಟಕದ 116 ವರ್ಷದ ಶತಾಯುಷಿ ಅಜ್ಜಿ ನವನೀತಮ್ಮ ಸಾಬೀತುಪಡಿಸಿದ್ದಾರೆ. ಆಂಧ್ರಪ್ರದೇಶದ ಜಗತ್ಪ್ರಸಿದ್ಧ ತಿರುಮಲ ಬೆಟ್ಟವನ್ನು ಅಜ್ಜಿಯವರು ತಮ್ಮ ಕುಟುಂಬಸ್ಥರೊಂದಿಗೆ ಕಾಲ್ನಡಿಗೆಯಲ್ಲೇ ಹತ್ತುವ ಮೂಲಕ ದೇಶಾದ್ಯಂತ ಲಕ್ಷಾಂತರ ಭಕ್ತರಿಗೆ ಅಪಾರ ಪ್ರೇರಣೆಯಾಗಿದ್ದಾರೆ.

ಅಜ್ಜಿ ಅತ್ಯಂತ ಉತ್ಸಾಹದಿಂದ ಮೆಟ್ಟಿಲುಗಳನ್ನು ಹತ್ತುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ತಿರುಮಲ ತಿರುಪತಿ ದೇವಸ್ಥಾನದ (TTD) ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮೂಲತಃ ಕರ್ನಾಟಕದವರಾದ ನವನೀತಮ್ಮ ಅವರ ಇಡೀ ಕುಟುಂಬವು ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿದ್ದಾರೆ. ಇತ್ತೀಚೆಗೆ ಕುಟುಂಬಸ್ಥರು ತಿರುಮಲ ಯಾತ್ರೆಗೆ ಯೋಜಿಸಿದಾಗ, ತಾನೂ ಕೂಡ ಕಾಲ್ನಡಿಗೆಯಲ್ಲೇ ಶೇಷಾಚಲಂ ಬೆಟ್ಟವನ್ನು ಏರುವುದಾಗಿ ಅಜ್ಜಿ ಪಟ್ಟು ಹಿಡಿದಿದ್ದರು. ಶೇಷಾಚಲಂ ಕಾಡುಗಳ ಮೂಲಕ ಹಾದುಹೋಗುವ ಅತ್ಯಂತ ಕಠಿಣವಾದ ‘ಅಲಿಪಿರಿ’ ಮಾರ್ಗವು ಸುಮಾರು 11 ಕಿಲೋಮೀಟರ್ ಉದ್ದವಿದ್ದು, ಬರೋಬ್ಬರಿ 3,550 ಕಡಿದಾದ ಮೆಟ್ಟಿಲುಗಳನ್ನು ಒಳಗೊಂಡಿದೆ. ದೈಹಿಕವಾಗಿ ಸದೃಢವಾಗಿರುವ ಯುವಕರೇ ಈ ಮಾರ್ಗದಲ್ಲಿ ಹತ್ತಲು ಹೈರಾಣಾಗುತ್ತಾರೆ. ಆದರೆ, ಈ ಶತಾಯುಷಿ ಮಾತೆ ತನ್ನ ಕುಟುಂಬಸ್ಥರ ದೈಹಿಕ ಬೆಂಬಲ ಹಾಗೂ ಪ್ರೋತ್ಸಾಹದೊಂದಿಗೆ ಇಷ್ಟು ದೊಡ್ಡ ಸಾಹಸವನ್ನು ಸಾಲಿಸಾಗಿ ಪೂರೈಸಿದ್ದಾರೆ.

ಅಜ್ಜಿ ಬೆಟ್ಟ ಏರುತ್ತಿದ್ದ ಅಪರೂಪದ ಕ್ಷಣವನ್ನು ಸಹಯಾತ್ರಿಯೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದು ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು. ಈ ವೀಡಿಯೋ ಗಮನಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ನಿಜವಾದ ಭಕ್ತಿಗೆ ವಯಸ್ಸು ಕೇವಲ ಸಂಖ್ಯೆ ಮಾತ್ರ. ಕರ್ನಾಟಕದ 116 ವರ್ಷದ ಅಜ್ಜಿ ತಿರುಮಲಕ್ಕೆ ನಡೆದೇ ಬಂದು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿರುವುದು ಮತ್ತು ಅವರ ಕುಟುಂಬ ನೀಡಿದ ಸಹಕಾರ ನಿಜಕ್ಕೂ ಸ್ಪೂರ್ತಿದಾಯಕ” ಎಂದು ಬಣ್ಣಿಸಿದ್ದಾರೆ.
ಇದೇ ವೇಳೆ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ತಕ್ಷಣವೇ ಅಲರ್ಟ್ ಆಗಿ ಅಜ್ಜಿ ಹಾಗೂ ಅವರ ಇಡೀ ಕುಟುಂಬಕ್ಕೆ ಮಂಡಳಿಯ ವತಿಯಿಂದ ವಿಶೇಷ ‘ವಿಐಪಿ ದರ್ಶನ’ದ (VIP Darshan) ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. “ನನ್ನ ಅಜ್ಜಿಯ ಆಸೆಯನ್ನು ಗೌರವಿಸಿ ಇಡೀ ಕುಟುಂಬಕ್ಕೆ ಉತ್ತಮ ದರ್ಶನ ಭಾಗ್ಯ ಕಲ್ಪಿಸಿದ ಟಿಟಿಡಿ ಮಂಡಳಿ ಹಾಗೂ ಅಧ್ಯಕ್ಷರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು” ಎಂದು ಅಜ್ಜಿಯ ಮೊಮ್ಮಗ ಭಾವುಕರಾಗಿ ನುಡಿದಿದ್ದಾರೆ.