Connect with us

    MANGALORE

    ರಸ್ತೆಯೆಲ್ಲಾ ಗಬ್ಬು-ಪಟ್ಟಣ ಪಂಚಾಯತ್ ಮಾತ್ರ ಚುಪ್ಪು.!!

    ಮಂಗಳೂರು, ಜುಲೈ.19: ದೈನಂದಿನ ತ್ಯಾಜ್ಯ ವಿಲೇವಾರಿ ಮಾಡುವ ಜವಾಬ್ದಾರಿ ಪ್ರತಿ ಸ್ಥಳಿಯಾಡಳಿತದ ಜವಾಬ್ದಾರಿಯಾಗಿದೆ. ಆದರೆ ಈ ಜವಾಬ್ದಾರಿಯನ್ನು ಎಷ್ಟು ಜನ ನಿರ್ವಹಿಸುತ್ತಾರೆ ಮಾತ್ರ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಎರಡೂ ಬದಿಗಳಲ್ಲಿ ಇಂದು ಲಾರಿ-ಟೆಂಪೋಗಳಲ್ಲಿ ಲೋಡುಗಟ್ಟಲೆ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದ್ದು, ಸಂಬಂಧಪಟ್ಟವರು ಕಣ್ಣಿದ್ದೂ ಕುರುಡರಾಗಿದ್ದು, ಕಿವಿಯಿದ್ದೂ ಕಿವುಡರಂತಾಗಿದ್ದಾರೆ.

    ಇದಕ್ಕೆ ಉತ್ತಮ ಉದಾಹರಣೆ ಉಳ್ಳಾಲ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬರುವಂತಹ ಬೀರಿ- ದೇರಳಕಟ್ಟೆ ರಸ್ತೆ. ಈ ರಸ್ತೆಯ ಇಕ್ಕೆಲಗಳಲ್ಲೂ ಘನ ಹಾಗೂ ದ್ರವ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದ್ದು, ರಸ್ತೆಯ ತುಂಬಾ ಗಬ್ಬುವಾಸನೆ ನಾರುತ್ತಿದ್ದು, ಈ ರಸ್ತೆಯಲ್ಲಿ ಸಾಗುವವರು ಮಾತ್ರವಲ್ಲ ಸುತ್ತಮುತ್ತಲಿನ ಜನರೂ ಮೂಗು ಮುಚ್ಚಿ ನಡೆಯಬೇಕಾದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬೀರಿ ಜಂಕ್ಷನ್ ನ ಪಕ್ಕದಲ್ಲಿ ಹಾಗೂ ಅಲೋಶಿಯಸ್ ಇಂಜಿನಿಯರಿಂಗ್ ಕಾಲೇಜಿನ ಪಕ್ಕದಲ್ಲಿ ಸತ್ತ ಕೋಳಿ, ಮಾಂಸ ತ್ಯಾಜ್ಯ ಸೇರಿದಂತೆ ಎಲ್ಲಾ ತ್ಯಾಜ್ಯಗಳನ್ನು ಬೇಕಾ ಬಿಟ್ಟಿ ಸುರಿಯಲಾಗುತ್ತಿದ್ದು, ಸಂಬಂಧಪಟ್ಟ ಪಟ್ಟಣ ಪಂಚಾಯತ್ ಮಾತ್ರ ತನಗೂ , ಇದಕ್ಕೂ ಯಾವುದೇ ಸಂಬಂಧವೇ ಇಲ್ಲದಂತಾಡುತ್ತಿದೆ. ಪ್ರಸ್ತುತ ಸ್ಥಳದಲ್ಲಿ ತ್ಯಾಜ್ಯಗಳನ್ನು ಸುರಿಯಬಾರದೆಂದು ಎರಡು ತಿಂಗಳ ಹಿಂದೆ ಬೋರ್ಡ್ ಹಾಕಿ ಹೋಗಿದ್ದರೂ, ತ್ಯಾಜ್ಯಗಳ ವಿಲೇವಾರಿಗೆ ಯಾವ ಪರ್ಯಾಯ ಕ್ರಮವನ್ನೂ ಕೈಗೊಂಡಿಲ್ಲ. ಈ ಕಾರಣಕ್ಕಾಗಿ ಜನ ಮತ್ತೆ ಮತ್ತೆ ಅದೇ ಸ್ಥಳದಲ್ಲಿ ತ್ಯಾಜ್ಯಗಳನ್ನು ಸುರಿಯುವುದನ್ನು ಮುಂದುವರಿಸಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಈ ತ್ಯಾಜ್ಯಗಳು ಜನರ ಆರೋಗ್ಯದ ಮೇಲೂ ಪರಿಣಾಮವನ್ನು ಉಂಟು ಮಾಡಲಿದ್ದು, ವಿವಿಧ ರೋಗಗಳು ಹರಡುವ ಭೀತಿಯೂ ಇದೆ. ಅಲ್ಲದೆ ತ್ಯಾಜ್ಯ ಸುರಿಯುವ ಸ್ಥಳದ ತುಂಬಾ ಬೀದಿ ನಾಯಿಗಳ ಕಾಟವೂ ಶುರುವಾಗಿದ್ದು, ಜನ ಸುರಿದ ತ್ಯಾಜ್ಯಗಳ ಪೊಟ್ಟಣವನ್ನು ರಸ್ತೆ ತುಂಬಾ ಚೆಲ್ಲಾಡುವ ಕಾರ್ಯದಲ್ಲೂ ಈ ನಾಯಿಗಳು ನಿರತವಾಗಿವೆ. ಹಸಿ ಮಾಂಸದ ತಾಜ್ಯವನ್ನು ಆಹಾರವಾಗಿ ತಿನ್ನುವ ಈ ಬೀದಿ ನಾಯಿಗಳಿಂದ ಮಕ್ಕಳು ಹಾಗೂ ವೃದ್ದರಿಗೆ ಅಪಾಯ ಕಟ್ಟಿಟ್ಟ ಬುತ್ತಿ.!!
    ಪ್ರತಿದಿನ ತ್ಯಾಜ್ಯ ವಿಲೇವಾರಿ ನಡೆಸಬೇಕಾದ ಪಟ್ಟಣ ಪಂಚಾಯತ್ ಮಾತ್ರ ಇದೀಗ ವಾರಕ್ಕೆರಡು ಬಾರಿ ತ್ಯಾಜ್ಯಗಳನ್ನು ರಸ್ತೆ ಬದಿಯಿಂದ ಸಂಗ್ರಹಿಸುತ್ತಿದೆ. ಆದರೆ ಆ ಎರಡು ವಾರಗಳ ಮಧ್ಯೆ ರಸ್ತೆಯಲ್ಲಿ ಸಂಚರಿಸುವ ಜನ ಹಾಗೂ ರಸ್ತೆ ಬದಿಯಲ್ಲಿರುವ ಮನೆಗಳ ಜನ ಮಾತ್ರ ನರಕಯಾತನೆಯನ್ನೇ ಅನುಭವಿಸುತ್ತಿದ್ದಾರೆ. ಇನ್ನಾದರೂ ಪಟ್ಟಣ ಪಂಚಾಯತ್ ಈ ಕುರಿತು ಗಮನಹರಿಸಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳಬೇಕಾಗಿದೆ. ಎಲ್ಲಾ ಪ್ರಕಾರದ ತ್ಯಾಜ್ಯಗಳನ್ನು ರಸ್ತೆಯ ಪಕ್ಕದಲ್ಲೇ ಸುರಿಯುವುದ ಕೆಟ್ಟ ಪರಿಣಾಮ ಜನರ ಆರೋಗ್ಯದ ಮೇಲೆ ಆಗುವ ಮೊದಲೇ ಅಧಿಕಾರಿಗಳು ಹಾಗೂ ಆಡಳಿತವರ್ಗ ಎಚ್ಚೆತ್ತುಕೊಳ್ಳಬೇಕಿದೆ. ರೈಲು ಹೋದ ಮೇಲೆ ಟಿಕೆಟ್ ತೆಗೆಯುವ ಸಂಸ್ಕೃತಿ ನಿಲ್ಲಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply