ರಮಾನಾಥ ರೈ ವಿರುದ್ದ ಲೋಕಾಯಕ್ತಕ್ಕೆ ದೂರು – ಹರಿಕೃಷ್ಣ ಬಂಟ್ವಾಳ
ಮಂಗಳೂರು ನವೆಂಬರ್ 15: ಬಿ. ರಮಾನಾಥ ರೈ ಅಕ್ರಮ ಭೂ ಕಬಳಿಕೆ ಆರೋಪದ ಬಗ್ಗೆ ನೀಡಿರುವ ಸ್ಪಷ್ಟನೆಯನ್ನು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಟೀಕಿಸಿದ್ದಾರೆ, ಸಚಿವರು ತನ್ನ ಆಸ್ತಿಯ ಕುರಿತಂತೆ ಎಸ್ಕೇಪಿಂಗ್ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಮಾನಾಥ ರೈ ಅವರ ಪತ್ನಿ ಅಕ್ರಮ ಸಕ್ರಮದ ಮೂಲಕ ಬಡವರ ಜಾಗ ಕಬಳಿಸಿದ್ದಾರೆ ಎಂದು ಆರೋಪಿಸಿದರು. ರಮಾನಾಥ ರೈ ತನ್ನ ಹೆಂಡತಿಯ ಹೆಸರಿನಲ್ಲಿ 3.04 ಸೆಂಟ್ಸ್ ಜಾಗ ಕಬಳಿಸಿದ್ದಾರೆ ಎಂದು ಹೇಳಿದ ಅವರು, ಕಳ್ಳಿಗೆಯಲ್ಲಿ ರೈ ಸರ್ವೆ ನಂ.97/1 ರಲ್ಲಿ 10 ಎಕರೆ ಜಾಗವನ್ನು ಕಬಳಿಸಿ ಅಲ್ಲಿ ರಬ್ಬರ್ ತೋಟ ನೆಟ್ಟಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ ಆರೋಪಿಸಿದರು. ಈ ಎಲ್ಲಾ ಜಾಗಗಳ ಕುರಿತಂತೆ ಜಿಲ್ಲಾಧಿಕಾರಿಯವರು ತನಿಖೆ ಮಾಡಬೇಕೆಂದು ಆಗ್ರಹಿಸಿದರು.
ಸಚಿವ ರಮಾನಾಥ ರೈ ಕಬಳಿಸಿರುವ ಸರಕಾರಿ ಜಾಗದ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ಅವರು ಆರ್ ಟಿಸಿ ಪ್ರಕಾರ ರಮಾನಾಥ ರೈ ಕಬಳಿಸಿರುವ ಜಾಗ ಸರಕಾರದ್ದು ಇದರ ಬಗ್ಗೆ ಪೂರ್ಣ ದಾಖಲೆಯಿದೆ ಎಂದರು. ಈ ಹಿನ್ನಲೆಯಲ್ಲಿ ನವೆಂಬರ್ 17ರಂದು ಲೋಕಾಯುಕ್ತ ಜಸ್ಟಿಸ್ ವಿಶ್ವನಾಥ ಶೆಟ್ಟಿಯವರಿಗೆ ರೈ ವಿರುದ್ದ ದೂರು ನೀಡಲಾಗುವುದು ಎಂದ ಅವರು ಅಲ್ಲದೆ ಎಸಿಬಿಗೂ ರಮಾನಾಥ ರೈ ಅವರ ಅಕ್ರಮ ಭೂಕಬಳಿಗೆ ವಿರುದ್ದ ದೂರು ನೀಡಲಾಗುವುದು ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.